ನೀರ್ದೋಸೆ ಬಿಡುಗಡೆಯಾಗಿ ಕರ್ನಾಟಕದಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದೆ. ಅಷ್ಟು ಮಾತ್ರವಲ್ಲ, ಈಗ ನೀರ್ ದೋಸೆಯ ಘಮ ಕನ್ನಡ ನಾಡಿನ ಗಡಿ ದಾಟಿ ಪ್ರಪಂಚದಾದ್ಯಂತ ಪಸರಿಸುತ್ತಿದೆ. ವಿಜಯ ಪ್ರಸಾದ್ ನಿರ್ದೇಶನದ ಈ ಸಿನಿಮಾ ಬಿಡುಗಡೆಗೆ ಮುನ್ನವೇ ಜಗತ್ತಿನಲ್ಲಿರವ ಎಲ್ಲ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಬಿಡುಗಡೆಯಾದ ಎಲ್ಲ ಕಡೆ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಹೊರ ದೇಶಗಳಲ್ಲೂ ರಿಲೀಸ್ ಮಾಡಲು ಬೆವಿನ್ ಎಕ್ಸ್ಪೋರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತಯಾರಿ ನಡೆಸಿದೆ.
ಆಸ್ಟ್ರೇಲಿಯಾ, ಸಿಂಗಪೂರ್, ಹಾಂಕಾಂಗ್, ನ್ಯೂಜಿಲೆಂಡ್, ಜರ್ಮನಿ, ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ, ಕೆನಡಾ, ಯುಕೆ, ಯೂರೋಪ್, ನೆದರ್ಲ್ಯಾಂಡ್, ಸ್ವೀಡನ್, ಫಿನ್ಲ್ಯಾಂಡ್, ಸ್ವಿಡ್ಜರ್ಲೆಂಡ್, ಜಪಾನ್, ಮಲೇಶಿಯಾ ಮತ್ತು ಬ್ಯಾಂಕಾಕ್ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ಮುಂದಿನ ವಾರದಿಂದ ‘ನೀರ್ದೋಸೆ’ಯ ಸವಿಯನ್ನು ಉಣಬಡಿಸಲು ವಿತರಕ ಜೋಯೆಲ್ ಸುಮಂತ್ ಮುಂದಾಗಿದ್ದಾರೆ.
ಜಗ್ಗೇಶ್ ನಾಗಕನಟರಾಗಿ ನಟಿಸಿರುವ ನೀರ್ದೋಸೆ ಸಿನಿಮಾ ಕುರಿತು ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರ ನಡುವೆ ಹುಟ್ಟಿಕೊಂಡಿರುವ ಕ್ರೇಜ್ ನೋಡಿದರೆ ಖಂಡಿತವಾಗಿಯೂ ಈ ಚಿತ್ರ ಬಿಡುಗಡೆಯಾದ ಎಲ್ಲ ದೇಶಗಳಲ್ಲೂ ಜನಮನ ಸೂರೆಗೊಳ್ಳಲಿದೆ ಅನ್ನೋದು ಜೋಯಲ್ ಸುಮಂತ್ ಅವರ ನಂಬಿಕೆಯಂತೆ. ಒಟ್ಟಾರೆ, ದತ್ತಣ್ಣ, ಹರಿಪ್ರಿಯಾ ಮತ್ತು ಜಗ್ಗೇಶ್ರ ಅಪರೂಪದ ಕಾಂಬಿನೇಷನ್ ಈಗ ಹೊರನಾಡಿನ ಕನ್ನಡಿಗರನ್ನೂ ಕಮಾಲ್ ಮಾಡಲಿದೆ. ಆ ಮೂಲಕ ನಿರ್ದೇಶಕ ವಿಜಯ ಪ್ರಸಾದ್ ಮತ್ತು ತಂಡದ ಶ್ರಮ ಸಾರ್ಥಕ್ಯ ಪಡೆಯಲಿದೆ.